Tuesday, June 29, 2010

ನೀರ ಮೇಲಣ..

ಜೀವನವೇ ಇಷ್ಟು.. ನಶ್ವರ.


ಚಿತ್ರ ನಮ್ಮ ನೆರೆ ಮನೆಯದ್ದು.. ಅಲ್ಲ ಮನೆ ಇದ್ದ ಜಾಗದ್ದು.

ಒಳ್ಳೆ ಬೆಲೆ ಸಿಕ್ಕಿತೆಂದು ಜಮೀನು ಮನೆ ಮಾರಿ ಅಲ್ಲಿದ್ದ ತುಂಬು ಕುಟುಂಬ ಬಂದ ಹಣ ಪಾಲು ಮಾಡಿ ಬೇರೆಯಾಯಿತು. ಮನೆ ಹಂಚು ತೆಗೆದ ಕಾರಣ ಕಳೆದ ಮಳೆಗಾಲಕ್ಕೆ ಗೊಡೆಗಳು ಕುಸಿದಿವೆ. ಮಳೆಗಾಲಕ್ಕೆ ಇದು ಮಣ್ಣಲ್ಲಿ ಮಣ್ಣಾಗೊ ಮೊದಲು ನೆನಪಿಗಿರಲೆಂದು ಫೊಟೊ ಕ್ಲಿಕ್ಕಿಸಿದೆ.

ದಿನವಿಡಿ ಕಿರುಚುತ್ತ ಮಕ್ಕಳು ಕೇಕೆ ಹಾಕುತ್ತಿದ್ದ ಇದರ ಅಂಗಳದಲ್ಲೀಗ ಬರೀ ಗಿಡ ಗಂಟಿ ಪಾಚಿ.


ಯಾವುದು ಶಾಶ್ವತವಲ್ಲ.. ಆದರೂ ಸುಮಾರು 70 ವರ್ಷ ಒಂದು ಕುಟುಂಬ ಬಾಳಿ ಬದುಕಿದ ಮನೆ ಈ ಸ್ಥಿತಿ ನೊಡುವಾಗ ಮನಸಿಗೆಕೊ ಕಸಿವಿಸಿ.

ದಾಸರು ಹೇಳಿದಂತೆ.. ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ.. ಅಲ್ಲವೆ?


-ಶ್ರವಣ

Friday, June 18, 2010

ಹೀಗೊಂದು ಸ್ವಗತ- ಸ್ವಾಗತ


ಇಲ್ಲಿ ಎನೆಲ್ಲಾ ವಿಷಯ ಬರೀಬೇಕಾದ್ರೆ ಯಾಕೆ ನನ್ನಿಷ್ಟದ ಮಳೆ ಬಗ್ಗೆ ಬರಿಬಾರ್ದು?

ಮಳೆಗಾಲ ಅಂದ್ರೇನೇ ಎನೊ ಸಂತೊಷ.. ಮಳೆ ಅಂದ್ರೆ ತುಂಬಾ ಮಂದಿಗೆ ಇಷ್ಟವಾಗುತ್ತೆ ಎಂದನಿಸುತ್ತೆ.. ಯಾಕೆಂದ್ರೆ ಅದರ entry ಹಾಗಿರುತ್ತಲ್ಲಾ.. ಬಿಸಿಲ ಬೇಗೆಗೆ ಭೂಮಿ ಕಾದು ಕೆಂಪಾಗಿ, ಧಗೆಗೆ ಬೆವರಿಳಿಸಿ ಸಾಕಗಿರಬೇಕಾದರೆ ಬರೊ ಮಳೆಗಾಲ ಯಾರಿಗೆ ತಾನೆ ಹಿಡಿಸಲ್ಲ.


ಆದ್ರೆ ಮತ್ತೆ ಅದೆ ಮಳೆ ಜೊರಾಗಿ ತಿಂಗಳಾನುಗಟ್ಟಲೆ ಬಂದಾಗ ಕೆಲವರಿಗೆ ಸಾಕು ಬೇಕಾಗುತ್ತೆ. ಅತಿಯಾದ್ರೆ ಅಮೃತಾನು ವಿಷವಾಗುತ್ತೆ ಎನ್ನುತ್ತಾರಲ್ಲ ಹಾಗೆ. ಮಾತು ಯಾಕೊ ನನಗೆ ಅನ್ವಯಿಸುವುದಿಲ್ಲ. ಹಿಂದಿನ ಜನ್ಮದಲ್ಲಿ ಚಿರಾಪುಂಜಿಯಲ್ಲಿ ಹುಟ್ಟಿದ್ದೆ ಅನ್ಸುತ್ತೆ ಎಂದು ಯಾರದರು ಛೇಡಿಸಿದಾಗ ನನಗಂತು ಸ್ವಲ್ಪನೂ ಬೇಜಾರಿಲ್ಲ..:)


ಏನ್ಮಾಡೊದು ಜನ್ಮದಲ್ಲಂತು ಅಲ್ಲಿ ಇಲ್ಲವಲ್ಲಾ.. ವಿಷಾದ. ಆದರು ನಮ್ಮ ಕರಾವಳಿಯೇನು ಕಮ್ಮಿಯಿಲ್ಲ.. ನನ್ನ ಮಳೆಯ ಪ್ರೀತಿಗೆ ಇಲ್ಲಿ ಸಂಪೂರ್ಣ ಸಹಕಾರ ವರುಣ ದೇವನಿಂದ.

ಬರೊಬ್ಬರಿ ನಾಲಕ್ಕು ತಿಂಗಳು ಬಂದು ಮತ್ತೂ ಎರಡು ತಿಂಗಳು ಆಗೊಮ್ಮೆ ಈಗೊಮ್ಮೆ ಬಂದು ಸಂತಸ ಚೆಲ್ಲುತ್ತೆ.


ಆದ್ರು, ವಿಪರೀತ ಮಳೆ ಬಂದು ಬೆಳೆ ಹಾನಿಯಾದಾಗ, ಆಸ್ತಿ-ಪಾಸ್ತಿ ನಷ್ಟವಾದಾಗ ಬೇಸರವಾಗುತ್ತೆ. ಏನ್ಮಡೊದು ಪ್ರಕೃತಿ ವೈಪರೀತ್ಯ ನಮ್ಮ ಅಂಕೆಯಲ್ಲಿಲ್ಲವಲ್ಲಾ. ಸಮತೋಲನ ಹಾಳುಗೆಡವಿದ್ದು ಮಾನವನೆ ಅಂದ ಮೇಲೆ ದೂರುವುದು ಯಾರನ್ನ?


Any ways, ಮಳೆ ಎಂದಾಕ್ಷಣ ಇವನ್ನೆಲ್ಲ ಮರೆತು ಸವಿ ನೆನಪುಗಳು ಮಾತ್ರ ಇರಲ್ಲೆನುತ್ತೆನೆ, ಭಾರಿ ಯಾವ ಹಾನಿಯೂ ಇಲ್ಲದಿರಲೆಂದು ಹಾರೈಸುತಾ.



ಮಳೆ ಇಷ್ಟವಾಗಲು ಹಲವು ಕಾರಣಗಳು ಅಥವಾ ಕಾರಣವೇ ಬೇಕಿಲ್ಲ !


ಬಾಲ್ಯದ ಶಾಲಾ ದಿನಗಳ ಮಳೆಗಾಲ ಸದಾ ನೆನಪಿನಲ್ಲಿರುತ್ತೆ. ಮೈದಾನದಲ್ಲಿ ಆಟವಾಡಲು ಸಾಧ್ಯವಾಗದಿದ್ದರೂ, ನಾವೆ ರೂಪಿಸುತ್ತಿದ್ದ ಆಟಗಳಂತು ನಮ್ಮ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುತ್ತಿದ್ದವು. ಶಾಲೆಯಿಂದ ಮನೆಗೆ ಹೊಗುವಾಗಂತು ಬೇರೆಯದೆ ಮಜಾ. ಅಪ್ಪ ಅಮ್ಮ, ನಾನು ಒದ್ದೆಯಾಗದಿರಲಿ ಅಂತ raincoat, haat ಹಾಕಿ ಕೈಗೆ ಕೊಡೆನೂ ಕೊಟ್ಟು ಕಳಿಸ್ತಿದ್ರೆ ಒಳಗೊಳಗೆ ಬಂದಿಯಾದ ಭಾವನೆ. ಆದರೆ ಸಂಜೆಯಂತು ಸಂಪೂರ್ಣ ಸ್ವಾತಂತ್ಯ. raincoat ಸೀದಾ ಚೀಲದೊಳಗೆ. ಬರಿ ಚತ್ರಿ ಹಿಡಿದು ಒಂದೇ ಓಟ ಮನೆ ಕಡೆಗೆ. ಸಣ್ಣ ಪುಟ್ಟ ಹೊಂಡಗಳಿಗೆ ಚಲ್ಲನೆ ಹಾರುತ್ತಾ, ಚತ್ರಿ ತಿರುಗಿಸಿ ಸ್ನೆಹಿತರಿಗೆ ನೀರು ಸಿಡಿಸುತ್ತಾ, ಸ್ವಚ್ಚ ಝರಿಗಳಲ್ಲಿ ಕಾಲುಬಿಟ್ಟು ಕುಳಿತು ಅದಕ್ಕೆ ಕಲ್ಲೆಸೆಯುತ್ತಾ ಮನೆ ತಲುಪುದೆ ಸಂಭ್ರಮ. ಬಾಗಿಲಲ್ಲೆ towel ಹಿಡಿದು ಕಾಯುತ್ತಿರುವ ಅಮ್ಮನಿಂದ ತಲೆ ಒಣಗಿಸುತ್ತಾ, raincoat ಚೀಲದಲ್ಲಿ ಅಡಗಿದಕ್ಕೆ ನೂರ ಎಂಟು ಕಾರಣ ಹೇಳುತ್ತಿದ್ದೆ, ಅಡುಗೆ ಮನೆಯಿಂದ ಬರುತ್ತಿದ್ದ ಬಿಸಿ ಬಿಸಿ ಪಕೊಡ, ಹಲಸಿನ ಹಪ್ಪಳ, ಚಕ್ಕುಲಿ ಅಥವ ಬಜ್ಜಿ ಪರಿಮಳ ಸವಿಯುತ್ತಾ.

ಧಾರಕಾರ ಮಳೆಯೊಂದಿಗೆ ಗುಡುಗು ಸಿಡಿಲು ಬಂದಾಗ ಮಂಚ ಕುರ್ಚಿಯೆರುತ್ತಿದ್ದವರ ಕಾಲೆಯುವುದಕ್ಕೆ ಕಾಯುತ್ತಿದ್ದೆ.


ನಾನು ಬೆಳೆದಂತೆ, ಕಾಲ ಕಳೆದಂತೆ ಮಳೆಯು ತನ್ನ ರೂಪ ಪ್ರಮಾಣ ಬದಲಿಸುತ್ತಾ ಹೋಯಿತು. ಮೊದಲಿನಂತೆ ಈಗ ವಾರಗಟ್ಟಲೆ ಮಳೆ ಬರದ್ದಿದ್ದರೂ ಅದರ ಘಾಂಭೀರ್ಯವೇನೂ ಕಮ್ಮಿಯಾಗಿಲ್ಲ.


ರಾತ್ರಿ ಇಡೀ ಸುರಿದು ಹದಮಾಡಿದ ಮುಂಜಾವಿನಲ್ಲಿ ಕಡು ಕೆಮ್ಮಣ್ಣು ಪಚ್ಚೆ ಪೈರಿನಲ್ಲಿ ಹೆಜ್ಜೆ ಇಡುತ್ತಾ, ಒದ್ದೆಯಾಗಿನಿಂತ ಗಿಡಗಳ ಅಲುಗಿಸಿ ನೀರ ಮೈಮೆಲೆ ಚಿಮುಕಿಸುತ್ತ ಶುರುವಾದ ದಿನವಂತು ಶುಭದಿನ. ಛಾವಣಿಯಿಂದ ಸುರಿಯುವ ನೀರನ್ನು ಬೊಗೆಸೆಯಲ್ಲಿ ಹಿಡಿದು ಮಲೆ ಚಿಮ್ಮಿಸುವುದಲ್ಲಿ ಎನೊ ಖುಶಿ. ಪಕ್ಕದಲ್ಲಿ ನಿಂತವರ ಮುಖಕ್ಕೆ ಹಾಕುವುದರಲ್ಲಿ ಇನ್ನೂ ಖುಶಿ. ಹಾಗಂತ ನನ್ನ ಮುಖಕ್ಕೆ ಹಾಕಿದ್ರೆ ಎನೂ ಬೇಜಾರಿಲ್ಲ..


ಈಗಿನ ಯಾಂತ್ರಿಕ ಬದುಕಿನಲ್ಲಿ, ಮಳೆಯ ಆನಂದ ಸವಿಯಲು ಸಾಧ್ಯವಾಗದಿದ್ದರೂ, ಕಿಟಕಿ ಗಾಜಿನ ಹಿಮ ಪರದೆಯ ಮೇಲೆ ನೆನಪುಗಳ ಗೆರೆ ಗೀಚುತಾ ಮುಗಾರು ಮಳೆಗೆ ಇದೊ ಸ್ವಾಗತ.


-ಶ್ರವಣ